About Me

Thursday, July 10, 2008

ದರೋಜಿ ಕರಡಿ ಧಾಮ - ಕಮಲಾಪುರ (Daroji Bear Sanctuary)

ಬಳ್ಳಾರಿ ಜಿಲ್ಲೆ ಎಂದಾಕ್ಷಣ ನಮಗೆ ಕಣ್ಣಮುಂದೆ ಬರುವುದು, ಹಂಪಿಯ ಭವ್ಯ ಕಲಾವೈಭವ, ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆ, ಗಣಿಗಾರಿಕೆ ಹಾಗೂ ಬಿರು ಬಿಸಿಲು! ಆದರೆ, ಇವುಗಳ ಜೊತೆಗೆ ಬಳ್ಳಾರಿ ಜಿಲ್ಲೆಯು ಇನ್ನು ಎಷ್ಟೋ ಅಗಾಧ ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಬಳ್ಳಾರಿಗೆ ರಾಜ್ಯದಲ್ಲಿ ಬೇರೆ ಎಲ್ಲಾ ಜಿಲ್ಲೆಗಳಿಗಿಂತ ಬೇರೆಯದೇ ರೀತಿಯ ವಿಶೇಷತೆ ಇದೆ.

ಇಷ್ಟೋಂದು ವೈಶಿಷ್ಟ್ಯ, ಸೊಬಗನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಬಳ್ಳಾರಿಯಲ್ಲಿ ಇನ್ನೂ ಒಂದು ವೈಶಿಷ್ಟ್ಯವಿದೆ. "ಕರಡಿ ಧಾಮ" Bear Sanctuary; ಹೊಸಪೇಟೆಯ ಕಮಲಾಪುರದ ಬಳಿ ಇರುವ "ದರೋಜಿ ಕರಡಿ ಧಾಮ" Daroji Bear Sanctuary ಈ ಕರಡಿ ಧಾಮ ಹೆಚ್ಚಿನ ಮಂದಿಗೆ ತಿಳಿದಿಲ್ಲ, ಜೊತೆಗೆ ಇದರ ವಿಶೇಷತೆ ಮತ್ತು ಪ್ರಾಮುಖ್ಯತೆಯೂ ತಿಳಿದಿಲ್ಲ. ರಾಜ್ಯದಲ್ಲಿ ಎಲ್ಲಿಯೂ ಕರಡಿಗಳಿಗಾಗಿಯೇ ಪ್ರತ್ಯೇಕ ಧಾಮವಿಲ್ಲ. ಇದು ಬಳ್ಳಾರಿಯ ವಿಶೇಷ!

ಅಕ್ಟೋಬರ್ 1994 ರಲ್ಲಿ ರಾಜ್ಯ ಸರ್ಕಾರ 5,587 ಎಕರೆ ಪ್ರದೇಶದ ಬಿಳಿಕಲ್ಲು ಸಂರಕ್ಷಿತ ವನ ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶವನ್ನು ಧರೋಜಿ ಕರಡಿ ಧಾಮ ಎಂದು ಘೋಷಿಸಿ, ಕರಡಿಗಳನ್ನು ರಕ್ಷಿಸಿಕೊಂಡು ಬಂದಿದೆ. ಇಲ್ಲಿ ಸುಮಾರು 120 ಕರಡಿಗಳು ಇಲ್ಲಿ ವಾಸಿಸುತ್ತಿವೆ. ರಾಶಿ ರಾಶಿ ಬಂಡೆಗಳಿಂದ ಸೃಷ್ಟಿಯಾದ ಬೆಟ್ಟಗಳಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳಲ್ಲಿ ಈ ಕರಡಿಗಳ ವಾಸ ಮತ್ತು ಸಂತಾನಾಭಿವೃದ್ದಿ. ಆಹಾರಕ್ಕಾಗಿ ಈ ಕರಡಿಗಳು ಗುಹೆಗಳಿಂದ ಇಳಿದು ಕಾಡಿನೊಳಕ್ಕೆ ಬರುತ್ತವೆ. ಈ ಕರಡಿಧಾಮದಲ್ಲಿ ಕರಡಿಯ ಜೊತೆಗೆ ಚಿರತೆ, ತೋಳ, ನರಿ, ಕಾಡು ಹಂದಿ, ಮುಳ್ಳಂದಿ, ಪಂಗೋಲಿನ್, ನಕ್ಷತ್ರ ಆಮೆ, ಉಡ, ಮುಂಗುಸಿ, ನವಿಲು, ಕಾಡು ಕೋಳಿಗಳು ಇನ್ನೂ ಎಷ್ಟೊ ಪ್ರಾಣಿ ಸಂಕುಲಗಳನ್ನು ತನ್ನಲ್ಲಿ ಅಡಗಿಸಿಕೊಂಡು ಸಂರಕ್ಷಿಸುತ್ತಾ ಬಂದಿದೆ. 90 ಕ್ಕೂ ಹೆಚ್ಚು ಜಾತಿಯ ಪಕ್ಷಿ ಪ್ರಬೇಧಗಳು ಇವೆ ಮತ್ತು 27 ಕ್ಕೂ ಹೆಚ್ಚು ವಿಧದ ಚಿಟ್ಟೆಗಳು ಇವೆ.


ಕಳೆದ 2008 ಮಾರ್ಚಿ ತಿಂಗಳಲ್ಲಿ ನಾನು ಮತ್ತು ಲೋಕೇಶ್ ಮೊಸಳೆ ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಿ ಅಲ್ಲಿ 4 ದಿನಗಳನ್ನು ಕಳೆದು ಬಂದೆವು. 4 ದಿನಗಳಲ್ಲಿ 2 ದಿನ ದರೋಜಿ ಕರಡಿ ಧಾಮದಲ್ಲಿ ಕಳೆದರೆ ಮತ್ತೆರಡು ದಿನ ಹಂಪಿಯ ಸೌಂದರ್ಯ ಸವಿದೆವು. ದರೋಜಿ ಕರಡಿ ಧಾಮದ ಸಂರಕ್ಷಣೆಗಾಗಿ, ಅಲ್ಲಿನ ಯುವಕರು ಸ್ವಯಂಪ್ರೇರಿತರಾಗಿ ಕರಡಿ ಮತ್ತು ಕರಡಿ ಧಾಮದ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ ಮತ್ತು ಗದ್ದಲವಿಲ್ಲದೆ ತಮ್ಮ ಸೇವೆಸಲ್ಲಿಸುತ್ತಿದ್ದರೆ. ಅಂಥವರಲ್ಲಿ ಪ್ರಮುಖರು ಕಮಲಾಪುರದ ಪಂಪಾಸ್ವಾಮಿಯವರು ಮತ್ತು ಅವರ ಹತ್ತು ಗೆಳೆಯರು.

ದರೋಜಿ ಪ್ರವಾಸಿ ಮಂದಿರ
ಕಮಲಾಪುರದಿಂದ ಸುಮಾರು 6 ಕಿ.ಮೀ ದೂರದಲ್ಲಿನ ಪ್ರಶಾಂತ ವಾತಾವರಣದಲ್ಲಿ ದರೋಜಿ ಪ್ರವಾಸಿ ಮಂದಿರ ಇದೆ. ಅಲ್ಲಿನ ವಿಶಾಲ ಪ್ರದೇಶದಲ್ಲಿ ಗಿಡ ಮರಗಳ ಮದ್ಯೆ ನಿರ್ಮಿಸಿರುವ ಪ್ರವಾಸಿ ಮಂದಿರ ನಿಜಕ್ಕೂ ಸುಂದರ. ಅಲ್ಲಿ ಚಾರಣ (trekking) ಮಾಡಲು ಹಾದಿ ನಿರ್ಮಿಸಿದ್ದಾರೆ. Tent House ಗಳು ಸಹ ಇದೆ. ಮುಂಜಾನೆ ಎದ್ದು ಈ ದರೋಜಿ ಪ್ರವಾಸಿ ಮಂದಿರದಲ್ಲಿ ಹಾಗೇ ಒಮ್ಮೆ ಸುತ್ತಿ ಬಂದರೆ ಹಾಯ್! ಎನಿಸುತ್ತದೆ. ಮುಂಜಾನೆ ಕೊಂಚ ಬೇಗ ಎದ್ದರೆ ಪಕ್ಷಿಗಳ ಜಾತ್ರೆಯೇ ನೋಡಲು ಸಿಗುತ್ತದೆ! ತುಂಬಾ ಸುಸಜ್ಜಿತವಾಗಿ ಪ್ರಕೃತಿ ಪ್ರಿಯರಿಗೆ ಅನುಕೂಲಕರ ರೀತಿಯಲ್ಲಿ ಪ್ರವಾಸಿ ಮಂದಿರವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ.

ದರೋಜಿ ಪ್ರವಾಸಿ ಮಂದಿರದಲ್ಲೇ ಆರಾಮವಾಗಿ ಒಂದು ದಿನ ಕಳೆಯಬಹುದು!

ಮುಂದೆ...


ಗೆಳೆಯರಾದ ಪಂಪಾಸ್ವಾಮಿಯವರ ಸಹಾಯದಿಂದ ನಮ್ಮ ಕರಡಿ ಬೇಟೆಯನ್ನು ದರೋಜಿ ಪ್ರವಾಸಿ ಮಂದಿರದಿಂದ ಪ್ರಾರಂಭಿಸಿದೆವು. ಬೆಳಗ್ಗೆ ಬೇಗ ಎದ್ದು ಎಲ್ಲಾ ತಯಾರಿಯೊಂದಿಗೆ ಸುಮಾರು 6 ರಿಂದ 7 ಕಿ.ಮೀ ದೂರವಿರುವ ಕರಡಿ ಧಾಮಕ್ಕೆ ಹೊರಟೆವು, ಕರಡಿ ಧಾಮ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಪ್ರಶಾಂತತೆ, ಅಲ್ಲಲ್ಲಿ ಪಕ್ಷಿಗಳ ಟಿವ್... ಟಿವ್... ಕುಕ್ಕೂ... ಕುಕ್ಕೂ... ಸ್ವಾಗತಿಸುತ್ತಿತ್ತು. ಮುಂದೆ ಸಾಗಿ ಕರಡಿಧಾಮದ Watch tower ತಲುಪಿದೆವು. ಇನ್ನು ನಿರ್ಮಾಣ ಹಂತದಲ್ಲಿರುವ Watch tower ಸ್ಥಳದಲ್ಲಿ ನಿಂತರೆ ಕರಡಿಧಾಮದ ಪೂರ್ಣ ನೋಟ ಕಾಣಬಹುದು. ಧಾಮದ ಕಾಡಿನ ಹಿಂದೆ ದೊಡ್ಡ ದೊಡ್ಡ ಬಂಡೆಯ ಬೆಟ್ಟಗಳು, ಅಲ್ಲಿ ಎಲ್ಲೋ ದೂರದಲ್ಲಿ ಕರಿ ಮೆಣಸು ಉರುಳಿ ಬೀಳತ್ತಿರುವಂತೆ ಕಾಣುವ ಕರಡಿಗಳು!! ಕಾಡಿನ ಯಾವುದೋ ಸಂದುಗಳಿಂದ ನವಿಲಿನ ಕಾವ್... ಕಾವ್... ಸದ್ದು, ನಿಜಕ್ಕೂ ಸ್ವರ್ಗ!


ಅಲ್ಲಿಂದ ಪ್ರಯಾಣ ಮುಂದುವರಿಸಿ Core Area ತಲುಪಿದೆವು, ಕರಡಿಗಳು ಇಲ್ಲಿಗೆ ಪ್ರತಿ ದಿನ ಭೇಟಿ ನೀಡುತ್ತವೆ. ಅಲ್ಲಿ ನಾವು ಅಡಗಿ ಕುಳಿತು ಕರಡಿಗಾಗಿ ಕಾಯತೊಡಗಿದೆವು. ಸ್ವಲ್ಪ ಸಮಯದಲ್ಲೆ ಎಂದಿನ ತಮ್ಮ ಹಾದಿಯಲ್ಲಿ ಕರಡಿಗಳ ಗುಂಪೊಂದು ಬಂತು, ಈ ಹಿಂದೆ ಎಂದೂ ಕರಡಿಗಳನ್ನು ಅಷ್ಟು ಸನಿಹದಿಂದ ನೋಡಿರದ ನನಗೆ ಒಳಗೆ ಭಯ ಪ್ರಾರಂಭವಾಯಿತು. ಇದರ ನಡುವೆಯೆ ಸುಮಾರು ಚಿತ್ರಗಳನ್ನು ಕ್ಲಿಕ್ಕಿಸಿದೆ. ಈಗೆಯೇ ಬಂಡೆಗಳ ಸಂದುಗಳಿಂದ ಸಂಜೆಯವರೆಗೂ ಕರಡಿಗಳ ಆಗಮನ ಮತ್ತು ನಿರ್ಗಮನ ನಿರಂತರವಾಗಿತ್ತು. ಮದ್ಯೆ, ನವಿಲುಗಳು, ಮುಂಗುಸಿ, ಕಾಡು ಕೋಳಿಗಳು, ಕಾಡು ಹಂದಿ ಮತ್ತು ಹಲವಾರು ಪಕ್ಷಿಗಳ ಆಗಮನ ಖುಷಿ ತಂದಿತ್ತು. ಸಂಜೆ 5.30 ರವರೆಗೆ ನಮ್ಮ ಛಾಯಾಚಿತ್ರ ಬೇಟೆ ಮುಂದುವರೆದಿತ್ತು. ನಂತರ ಕತ್ತಲಾದಂತೆ ನಮ್ಮ ಅಡಗು ತಾಣದಿಂದ ಹೊರಟೆವು. ಬೆಳಗ್ಗೆಯಿಂದ ಕಾರಿನೊಳಗೆ ಕೂತು ಸುಸ್ತಾಗಿತ್ತು, ಜೊತೆಗೆ ಜೋರು ಬಿಸಿಲು. ಆದರೂ ಕ್ಲಿಕ್ಕಿಸಿದ ಎಷ್ಟೊ ಚಿತ್ರಗಳನ್ನು ನೋಡಿ ಸಂತಸ ಪಡುವಾಗ ಒಂದು ರೀತಿಯ ಸಮಾಧಾನ ಭಾವ, ಇದರ ನಡುವೆ ಎಲ್ಲಾ ಕಷ್ಟ, ಸುಸ್ತು ಮತ್ತು ಬಿಸಿಲ ತಾಪ ಮರೆತು ಹೋಗುತ್ತಿತ್ತು. ಇದೇ ಸಂತಸದೊಂದಿಗೆ ಕತ್ತಲಾಗುತ್ತಿದ್ದಂತೆ ಪ್ರವಾಸಿ ಮಂದಿರ ಸೇರಿದೆವು.

ಮತ್ತೆ ಮುಂಜಾನೆ ಯತಾವತ್ ಬೇಗ ಎದ್ದು ಕರಡಿಧಾಮದ Core Area ಸೇರಿಕೊಂಡೆವು. ಸಂಜೆಯವರೆಗೂ ಬರಿ ಕ್ಲಿಕ್... ಕ್ಲಿಕ್... ಕ್ಲಿಕ್...


ಕರಡಿಗಳ ಬಗ್ಗೆ ಮತ್ತೊಂದಷ್ಟು ಮಾಹಿತಿ:
ಪ್ರಪಂಚದಲ್ಲಿ 8 ಜಾತಿಯ ಕರಡಿಗಳಿದ್ದು, Indian Sloth Bear ಎಂದು ಕರೆಸಿಕೊಳ್ಳುವ ಕಪ್ಪು ಕೂದಲಿನ ಕತ್ತಿನ ಕೆಳಗೆ ಎದೆಭಾಗದಲ್ಲಿ ಬಿಳಿ ಅಥವಾ ಕೆನೆ ಬಣ್ಣದಲ್ಲಿ "V" ಅಥವಾ "U" ಆಕಾರದಲ್ಲಿ ವಿನ್ಯಾಸವಿರುವ ಈ ಕಾರಡಿಗಳು ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ವಾಸಿಸುತ್ತವೆ.


ಕರಡಿಯ ತಲೆಯು ಗಾತ್ರದಲ್ಲಿ ದೊಡ್ಡದಿದ್ದು, ಕಿವಿ ಮತ್ತು ಕಣ್ಣು ಸಣ್ಣದಾಗಿರುತ್ತದೆ. ಇವುಗಳಿಗೆ ಕಣ್ಣು ಮತ್ತು ಕಿವಿ ಮಂದವಾಗಿದ್ದು ಸೂಕ್ಷ್ಮ ಶ್ರವಣ ಹಾಗೂ ದೃಷ್ಟ ಇರುವುದಿಲ್ಲ. ಆದರೆ, ವಾಸನೆಗಳನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿಯು ಚುರುಕಾಗಿರುತ್ತದೆ. ಕಂದು ಬಣ್ಣದ ಉದ್ದನೆಯ ಮೂತಿ ಮತ್ತು ತುಟಿಗಳು ಮೃದುವಾಗಿಯೂ ಹಾಗೂ ತುಂಬಾ ಹಗುರವಾಗಿಯೂ ಇರುತ್ತದೆ. ಇದರ ಸಹಾಯದಿಂದ ಕರಡಿಗಳು ಸುಲಭವಾಗಿ ಇರುವೆಗಳು ಮತ್ತು ಗೆದ್ದಲು ಹುಳುಗಳನ್ನು ತಿನ್ನಲು ಸಹಕಾರಿಯಾಗಿರುತ್ತದೆ. ಗಂಡು ಕರಡಿಗಳು ಸುಮಾರು 80-140 ಕೆಜಿಯಷ್ಟು ತೂಕವಿರುತ್ತದೆ. ಹೆಣ್ಣು ಕರಡಿಯು ಸುಮಾರು 55-95 ಕೆಜಿಯಷ್ಟು ತೂಕವಿರುತ್ತವೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಸಂತಾನಾಭಿವೃದ್ದಿಯಲ್ಲಿ ತೊಡಗುತ್ತವೆ. ಈ ಸಂದರ್ಭದಲ್ಲಿ ಗಂಡು, ಹೆಣ್ಣುಗಳ ಮಧ್ಯೆ ಸಣ್ಣ ಜಗಳಗಳೂ ಸಾಮಾನ್ಯವಾಗಿರುತ್ತವೆ. ಸಾಮಾನ್ಯವಾಗಿ ಚಳಿಗಾಲದಲ್ಲಿ 2 ರಿಂದ 3 ಮರಿಗಳನ್ನು ಹೆರುತ್ತವೆ. ಆಗಿನ್ನು ಹುಟ್ಟಿದ ಮರಿಗಳು ತುಂಬಾ ಸಣ್ಣದಾಗಿ, ಕೂದಲುಗಳಿಲ್ಲದೆ ಮತ್ತು ಮೂರು ವಾರಗಳ ಕಾಲ ಮರಿಗಳಿಗೆ ಕಣ್ಣು ಕಾಣುವುದಿಲ್ಲ.. 2 ರಿಂದ 3 ವರ್ಷಗಳ ಕಾಲ ಮರಿಗಳನ್ನು ತಾಯಿ ಸಾಕುತ್ತದೆ.


ಕರಡಿಗಳು ತನ್ನ ಮರಿಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಮುಂದೆ ಸಾಗುತ್ತದೆ. ಕರಡಿ ಮರಿಗಳು ತಾಯಿಯ ಸುತ್ತಾ ಆಡಿಕೊಂಡು ಓಡಾಡಿಕೊಂಡಿರುತ್ತದೆ ಮತ್ತು ತಾಯ್ ಬೆನ್ನ ಮೇಲೆ ಏರಲು ಪೈಪೋಟಿ ನೆಡೆಸುತ್ತವೆ. ಕರಡಿಗಳು ಸಾಮಾನ್ಯವಾಗಿ 40 ರಿಂದ 50 ವರ್ಷಗಳ ಕಾಲ ಬದುಕುತ್ತವೆ. ಸಾಮಾನ್ಯವಾಗಿ ಕರಡಿಗಳು ನಿಶಾಚರಿಗಳು! ಅತ್ಯುತ್ತಮವಾಗಿ ಮರ ಹತ್ತಬಲ್ಲವು ಮತ್ತು ಈಜಲೂ ಬಲ್ಲವು!!


ಆಹಾರ ಪದ್ದತಿ:
ಕರಡಿಗಳು ಪ್ರಮುಖವಾಗಿ ಹುಳುಗಳು, ಇರುವೆಗಳು ಮತ್ತು ಜೇನುತುಪ್ಪವನ್ನು ತಿನ್ನುತ್ತವೆ. ಹುಳುಗಳು ಮತ್ತು ಇರುವೆಗಳನ್ನು ತಿನ್ನಲು ತನ್ನ ಮೂತಿಯನ್ನು ಬಳಸುತ್ತವೆ. ಇರುವೆ ಗೂಡಿನೊಳಗೆ ಮೂಗಿನಿಂದ ಜೋರಾಗಿ ಗಾಳಿ ಬಿಟ್ಟು ದೂಳನ್ನು ಸರಿಸಿ ಬಾಯಿಂದ ಜೋರಾಗಿ ಎಳೆದುಕೊಂಡು ತಿನ್ನುತ್ತದೆ. ಇರುವೆ ಗೂಡಿನಲ್ಲಿ ಮೂತಿ ಇಟ್ಟು ಹೀರುವಾಗ ಜೋರದ ಶಬ್ದ ಬರುತ್ತದೆ. ಅದು ಸುಮಾರು 100 ಮೀಟರುಗಳ ದೂರದವರೆಗೂ ಕೇಳುತ್ತದೆ!


ಕರಡಿಗಳಿಗೆ ಜೇನುತುಪ್ಪ ಬಲು ಪ್ರೀತಿಯ ಆಹಾರ, ಜೇನುತುಪ್ಪ ರುಚಿಯನ್ನು ಸವಿಯಲು ಇವು ಮರವನ್ನು ಹತ್ತುತ್ತವೆ. ಮೈ ತುಂಬಾ ಕೂದಲುಗಳು ಇರುವುದರಿಂದ ಜೇನುಹುಳುಗಳ ವಿರೋಧ ಈ ಕರಡಿಗಳಿಗೆ ಲೆಕ್ಕಕ್ಕಿಲ್ಲ! ಕರಡಿಗಳು ರಸ ಭರಿತ ಹೂವುಗಳನ್ನು ತಿನ್ನುತ್ತವೆ. ಹಾಗೂ ಕಾಡಿನ ಎಷ್ಟೊ ಹಣ್ಣುಗಳನ್ನು ತಿನ್ನುತ್ತವೆ ಮತ್ತು ಹಣ್ಣುಗಳ ಬೀಜಗಳಲ್ಲಿ ಇರುವ "ಆಸಿಡ್" ಅಂಶ ಕರಡಿಗಳ "ಗ್ಯಾಸ್ಟ್ರಿಕ್" ಸಮಸ್ಯೆಗೆ ಔಷಧವಾಗಿದೆ. ಕರಡಿಗಳ ಮಲದ ಮೂಲಕ ಈ ಬೀಜಗಳು ಹೊರಬಂದು ಮಳೆಗಾಲದಲ್ಲಿ ಚಿಗುರಿ ಸಸ್ಯ ಕ್ರಾಂತಿಗೂ ಕಾರಣವಾಗುತ್ತದೆ.


ಮನುಷ್ಯ ಮತ್ತು ಕರಡಿಗಳು:
ಕರಡಿಗಳು ಸಾಮಾನ್ಯವಾಗಿ ರೋಷದಿಂದ ಇರುವುದಿಲ್ಲ. ಸೌಮ್ಯ ಸ್ವಭಾವದವು, ಮನುಷ್ಯರ ದ್ವನಿ ಕೇಳಿದರೆ ಅಥವಾ ಮನುಷ್ಯರ ವಾಸನೆ ಸಿಕ್ಕರೆ ಅಲ್ಲಿಂದ ದೂರ ಸರಿಯುತ್ತವೆ. ತೀರಾ ಜೀವ ಭಯ ಅಥವಾ ಅಪಾಯ ಅನಿಸಿದರೆ ಮಾತ್ರ ವ್ಯಾಘ್ರನಂತೆ ಮೇಲೆರಗುತ್ತವೆ.


ತಮ್ಮ ಬೆಳೆಗಳ ರಕ್ಷಣೆಗಾಗಿ ದಾಳಿಯ ಭಯದಿಂದ ಕೆಲವು ಹಳ್ಳಿಗಳ ರೈತರು ಕರಡಿಗಳನ್ನು ಕೊಲ್ಲುತ್ತಾರೆ. ಜೊತೆಗೆ ಮನುಷ್ಯನ ಜನಸಂಖ್ಯೆಯ ವಿಪರೀತ ಹೆಚ್ಚಳದಿಂದ, ಅರಣ್ಯ ನಾಶದಿಂದ, ಅರಣ್ಯ ಪ್ರದೇಶಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸುತ್ತಿರುವುದರಿಂದ ಹಾಗೂ ಕಾಡಿನ ಜೇನು ಗೂಡುಗಳನ್ನು ಮತ್ತು ಹಣ್ಣು ಹಂಪಲುಗಳಂತಹ ಪದಾರ್ಥಗಳನ್ನು ಮನುಷ್ಯನ ದಾಹಕ್ಕೆ ಕಿತ್ತು ತಿನ್ನುತಿರುವುದರಿಂದ ಕರಡಿಗಳು ಬಲವಂತವಾಗಿ ಆಹಾರ ಹುಡುಕಿಕೊಂಡು ದೂರ ಸರಿಯುವಂತಾಗಿದೆ ಜೊತೆಗೆ ಸಂತತಿ ನಶಿಸುತ್ತಿದೆ.


ಈ ದೃಷ್ಟಿಯಿಂದಾಗಿ, ದರೋಜಿ ಕರಡಿ ಧಾಮವು ಕರಡಿಗಳ ರಕ್ಷಣೆಯಲ್ಲಿ ತೊಡಗಿ, ಪ್ರಕೃತಿ ಪ್ರಿಯರು ಮತ್ತು ಇತರರು ಹಳ್ಳಿಗಳಲ್ಲಿ ಅರಿವು ಮೂಡಿಸಿ ಅವರ ಸಹಕಾರದಿಂದ ಕರಡಿಗಳ ರಕ್ಷಣೆ ಮಾಡಿಕೊಂಡು ಬಂದಿದೆ.


ಖ್ಯಾತ ವನ್ಯಜೀವಿ ಛಾಯಗ್ರಾಹಕ ಮತ್ತು ಮಾಜಿ ಮಂತ್ರಿ ಶ್ರೀ . ವೈ. ಎಂ. ಘೋರ್ಪಡೆ ಅವರ ಮಾರ್ಗದಶನದಲ್ಲಿ ಈ ದರೋಜಿ ಕರಡಿ ಧಾಮವು ಪ್ರಾರಂಭಗೊಂಡಿದೆ. ಈ ಕರಡಿ ಧಾಮಕ್ಕೆ ಭೇಟಿ ನೀಡಲು ಆಗಸ್ಟ್ ನಿಂದ ಏಪ್ರಿಲ್ ಮದ್ಯೆ ಸೂಕ್ತ ಸಮಯ.


ದರೋಜಿ ಕರಡಿ ಧಾಮದ ಭೇಟಿಗೆ, ಮಾಹಿತಿಗೆ ಮತ್ತು ಸಹಾಯಕ್ಕೆ ಪಂಪಾಸ್ವಾಮಿಯವರನ್ನು ಭೇಟಿ ಮಾಡಬಹುದು. ದೂರವಾಣಿ ಸಂಖ್ಯೆ 9449136252


ಹೆಚ್ಚಿನ ಮಾಹಿತಿಗೆ: http://www.karnataka.com/sloth bear ಹಾಗೂ http://wikipedia.com ಭೇಟಿಮಾಡಿ.

ಕರಡಿಯ ವಿವಿದ ಭಾವ-ಭಂಗಿಗಳ ಚಿತ್ರ:













ಅಣ್ಣ, ಗುರು... ಲೋಕೇಶ್ ಮೊಸಳೆ

ಹಂಪಿ (Hampi)

ಪ್ರಸಿದ್ದ ಕಲ್ಲಿನ ರಥ

ತೆನಾಲಿ ಮಂಟಪದಿಂದ ಪೂರ್ಣ ಹಂಪಿಯ ವಿಹಂಗಮ ನೋಟ

ಪಂಪಾಸ್ವಾಮಿಯವರು ತಮ್ಮ ಸ್ನೇಹಿತರಾದ ವಿರೂಪಾಕ್ಷ ಅವರನ್ನು ಜೊತೆಮಾಡಿ ಹಂಪಿ ಸುತ್ತಾಟಕ್ಕೆ ಕಳುಹಿಸಿದರು. ವಿರೂಪಾಕ್ಷರವರು ನಮಗೆ ಪೂರ್ಣ ಹಂಪಿಯ ದರ್ಶನ ಮಾಡಿಸಿದರು. ಕಲ್ಲಿನ ರಥ, ಪುರಂದರ ದಾಸ ಮಂಟಪ, ಕಮಲಾ ಮಹಲ್, ರಾಣಿ ಸ್ನಾನ ಗೃಹ, ಬನ್ನಿ ಮಂಟಪ, ಪಾನ್ ಬಜಾರ್, ತೆನಾಲಿ ಮಂಟಪ, ವಿರೂಪಾಕ್ಷ ದೇವಸ್ಥಾನ ಇನ್ನೂ ಎಷ್ಟೊ ಸ್ಥಳಗಳನ್ನು ನೋಡಿದೆವು. ಸಾಮಾನ್ಯ ಪ್ರವಾಸಿಗರು ಹೋಗದ, ನೋಡದ ಅಥವಾ ನಿರ್ಲಕ್ಷಿಸುವ ಎಷ್ಟೊ ಸ್ಥಳಗಳ ಭೇಟಿ ಮಾಡಿಸಿದರು. ಹಂಪಿಯ ವಿಜಯ ನಗರ ಸಾಮ್ರಾಜ್ಯದ ಇಂದಿನ ಪಳೆಯುಳಿಕೆಗಳು, ಹಾಳಾದ ಕಟ್ಟಡಗಳು, ವಿಗ್ರಹಗಳು, ಊರು, ರಸ್ತೆ ಮತ್ತು ಅಂದು ಬಳಸುತ್ತಿದ್ದ ತಂತ್ರಙ್ಞಾನವನ್ನು ನೋಡಿದರೆ ಅಂದಿನ ವೈಭವವನ್ನು ನೆನೆದು ಹುಬ್ಬೇರಿಸುವಂತಾಗುತ್ತದೆ. ಹಂಪಿಯ ವೈಭವವೇ ಅಂತಹುದು, ಕಣ್ಣಳತೆ ಮೀರಿ ಹಾಯ್ದ ಬೆಟ್ಟಸಾಲು, ಎತ್ತ ತಿರುಗಿದರೂ ಬಂಡೆ, ಗೋಪುರ, ಮಂಟಪ, ವಿಗ್ರಹ... ಹಂಪಿಯಲ್ಲಿ ಅಲೆದಾಡುತ್ತಾ ಮಾತು ಮೌನವಾಗುತ್ತದೆ, ಮನಸ್ಸು ಹಾಗೇ ಇತಿಹಾಸಕ್ಕೆ ಜಾರುತ್ತದೆ...




ಕೊನೆಯ ದಿನ:
ವಿರೂಪಾಕ್ಷರವರು, ವೀರೇಶ್ ಮತ್ತು ತಿಮ್ಮಣ್ಣನವರ ಸಹಾಯದಿಂದ ಕಮಲಾ ಮಹಲ್ ನ ಎದುರಿಗಿರುವ ತೆನಾಲಿ ಮಂಟಪ ಏರುವ ಹಠ ತೊಟ್ಟು ಬೆಳಗ್ಗೆ ಹೊರಟೆವು. ನೋಡಲು ಸಣ್ಣದಾಗಿ ಕಂಡರೂ ಸಾಗುತ್ತಾ ಮುಗಿಯದ ಹಾದಿಯಾಯಿತು. ತೆನಾಲಿ ಮಂಟಪಕ್ಕೆ ಸಾಮಾನ್ಯವಾಗಿ ಯಾರೂ ಹೋಗುವುದಿಲ್ಲ. ಅಲ್ಲಿಗೆ ತಲುಪಲು ಸರಿಯದ ಹಾದಿಯೂ ಇಲ್ಲ. ಮದ್ಯೆ ದಾರಿ ತಪ್ಪಿ ಪಟ್ಟ ಪಾಡು ಹೇಳಲಾಗದು ಆದರೂ ಒಂದು ರೀತಿ ಚೆನ್ನಾಗಿತ್ತು. ದಾರಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಎಷ್ಟೊ ಶಿಲ್ಪಗಳು, ಮಂಟಪಗಳನ್ನು ಕಂಡೆವು ಮತ್ತು ಹಿಂದಿನ ಕಾಲದಲ್ಲಿ ಅಲ್ಲಿಗೆ ಹೋಗಲು ಮಾಡಿದ್ದ ದಾರಿ ಗುರುತುಗಳನ್ನು ಅಲ್ಲಲ್ಲಿ ಗಮನಿಸಿದೆವು.


ತೆನಾಲಿ ಮಂಟಪ ಬೆಟ್ಟದ ಹಾದಿ ಮತ್ತು ನಿರ್ಲಕ್ಷಿತ ಶಿಲ್ಪಗಳು

ತೆನಾಲಿ ಮಂಟಪ ಹತ್ತಿರವಾದಂತೆಲ್ಲಾ ಬೆಟ್ಟ ಕಡಿದಾಗುತ್ತಾ ಸಾಗಿತ್ತು. ಮುಂದೆ ರಸ್ತೆ ಮುಗಿದು ಗುಹೆಯಂತಾ ಸ್ಥಳ ತಲುಪಿದೆವು, ಬಂಡೆಗಳ ಸಂದುಗಳಿಂದ ತೂರಿ ಬಂಡೆಗಳ ತಬ್ಬಿ ಸಾಗುವಂತಾ ಸ್ಥಿತಿ ಬಂತು ಈ ಕ್ಷಣದಲ್ಲಿ ಜೀವ ಕೈಗೆ ಬಂದಂತಾಯಿತು. ಹೇಗೋ ಆಗೂ ಈಗೂ ಕಷ್ಟಪಟ್ಟು ಮೇಲೆ ಏರಿದ ನಂತರ ಎಲ್ಲ ಕಷ್ಟಗಳು, ಸುಸ್ತು ಮತ್ತು ನೋವುಗಲನ್ನು ಕ್ಷಣಾರ್ಧದಲ್ಲಿ ಮರೆತು ಹೋಗುವಂತಾ ಸೌಂದರ್ಯ ಕಂಡು ಬೆರಗಾಯಿತು, ಸಂತಸದಿಂದ ಮನಸ್ಸು ಹಾರತೊಡಗಿತು. ಅಂಥಾ ಬಿಸಿಲಿನಲ್ಲಿಯೂ ತಂಪಾದ ಗಾಳಿ ಹಾಯ್ ಎನ್ನಿಸುತಿತ್ತು.



ತೆನಾಲಿ ಮಂಟಪ ಬೆಟ್ಟ ಮತ್ತು ದುರ್ಗಮ ಹಾದಿ

ತೆನಾಲಿ ಮಂಟಪದ ಹಿನ್ನೆಲೆ ಕಥೆ ಸ್ವಾರಸ್ಯಕರವಾಗಿದೆ. ಕೃಷ್ಣದೇವರಾಯನು ಮಂಟಪ, ದೇವಾಲಯಗಳ ನಿರ್ಮಾಣ ಸ್ಪರ್ದೆಯನ್ನು ಏರ್ಪಡಿಸಿದ್ದನಂತೆ. ಆಗ ತೆನಾಲಿ ರಾಮನು ಈ ಗುಡ್ಡದ ಮೇಲೆ ಸಣ್ಣದೊಂದು ಮಂಟಪವನ್ನು ನಿರ್ಮಿಸಿದನಂತೆ. ಕೃಷ್ಣದೇವರಾಯನು ತೆನಾಲಿಯನ್ನು ಕೇಳಿದನಂತೆ "ಎಲ್ಲರೂ ಎಷ್ಟೊಂದು ದೊಡ್ಡದಾಗಿ ಮತ್ತು ಸುಂದರವಾಗಿ ನಿರ್ಮಿಸಿದ್ದಾರೆ, ನೀನು ಮಾತ್ರ ಆ ಗುಡ್ಡದಲ್ಲಿ ಸಣ್ಣ ಮಂಟಪವನ್ನು ಏಕೆ ಮಾಡಿದೆ" ಎಂದರಂತೆ. ತೆನಾಲಿಯು "ದೊರೆಗಳೆ, ಎಲ್ಲರೂ ಭವ್ಯವಾಗಿ ನಿರ್ಮಿಸಿರಬಹುದು ಆದರೆ, ನನ್ನ ಮಂಟಪದ ವಿಶೇಷತೆ ಎಂದರೆ ಅಲ್ಲಿ ನೀವು ನಿಂತು ನೋಡಿದರೆ ಪೂರ್ಣ ಹಂಪಿಯು ಕಾಣುತ್ತದೆ. ಎಲ್ಲರೂ ಭವ್ಯವಾಗಿ, ಸುಂದರವಾಗಿ ನಿರ್ಮಿಸಿರುವ ಮಂಟಪ ಮತ್ತು ದೇವಸ್ಥಾನ ಒಂದೇ ಸ್ಥಳದಿಂದ ನೀವು ವೀಕ್ಷಿಸಬಹುದು. ಅದೇ ನನ್ನ ಮಂಟಪದ ವಿಶೇಷತೆ" ಎಂದನಂತೆ. ಅರಸರಿಂದ ಪ್ರಶಂಸೆಯನ್ನೂ ಪಡೆದನಂತೆ. ಇದು ಸತ್ಯವೂ ಹೌದು, ಕಥೆಯ ಸತ್ಯಾಸತ್ಯಥೆ ತಿಳಿದಿಲ್ಲ ಆದರೆ ಇಲ್ಲಿ ನಿಂತರೆ ಪೂರ್ಣ ಹಂಪಿಯ ದರ್ಶನವಂತೂ ಪಡೆಯಬಹುದು. ಎತ್ತ ತಿರುಗಿದರೂ ರಾಶಿ ರಾಶಿ ಬಂಡೆಗಳ ಸಾಲು ಮದ್ಯೆ ಗುಡಿ, ಗೋಪುರ, ಮಂಟಪ ಮತ್ತು ದೇವಸ್ಥಾನಗಳ ಆಗರ.



ತೆನಾಲಿ ಮಂಟಪ ಬೆಟ್ಟದ ಹಾದಿ ಮತ್ತು ನಿರ್ಲಕ್ಷಿತ ಶಿಲ್ಪಗಳು

ಸಂಜೆಯ ವೇಳೆಗೆ ಸೂರ್ಯಾಸ್ತದ ಆನಂದ ಅನುಭವಿಸಿ ರೂಮಿನ ಕಡೆಗೆ ವಾಪಸ್ಸಾದೆವು. ಸ್ವಲ್ಪ ವಿಶ್ರಮಿಸಿ ನಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ರಾತ್ರಿ ಬಸ್ಸು ಹತ್ತುವುದರೊಳಗೆ ಒಂದೆಡೆ ಮನಸ್ಸಿಗೆ ಖುಷಿ ಕೊಟ್ಟ ಛಾಯಾಚಿತ್ರಗಳು ಮತ್ತೊಂದೆಡೆ ನಾಲ್ಕು ದಿನಗಳಲ್ಲಿ ಬೆಳೆದ ಸ್ನೇಹಿತರ ಗುಂಪನ್ನು ಅಗಲುವ ಬೇಸರ.

ಪ್ರಸಿದ್ದ ಕಮಲಾ ಮಹಲ್

ಹಂಪಿಯ ಗತ ವೈಭವ ಸಾರುವ ಕೆಲವು ಸ್ಥಳಗಳು ಮತ್ತು ನಿರ್ಲಕ್ಷಿತ ಶಿಲ್ಪಗಳು, ಮಂಟಪಗಳು, ಚಿತ್ರಗಳು ಹಾಗೂ ಕುರುಹುಗಳು




















ದರೋಜಿ ಮತ್ತು ಹಂಪಿಯಲ್ಲಿ ನಮಗೆ ಸಹಾಯ ಮಾಡಿದ ಸಹೃದಯಿ ಸ್ನೇಹಿತರ ಬಳಗ:

ತೆನಾಲಿ ಮಂಟಪದ ತುದಿಯಲ್ಲಿ ವೀರೇಶ್, ತಿಮ್ಮಯ್ಯ, ವಿರೂಪಾಕ್ಷರವರು ಮತ್ತು ನಾನು.

ವಿರೂಪಾಕ್ಷರವರು, ಲೋಕೇಶ್ ಮೊಸಳೆ ಮತ್ತು ವೀರೇಶ್.

ಸಾಹಸದಲ್ಲಿ ಲೋಕೇಶ್ ಮೊಸಳೆ

ತೆನಾಲಿ ಮಂಟಪ ಏರುವ ಹಾದಿಯಲ್ಲಿ ವೀರೇಶ್


ತಿಮ್ಮಯ್ಯ ಮತ್ತು ವೀರೇಶ್

ನಮ್ಮ ಪ್ರೀತಿಯ ಗೆಳೆಯರಾದ ವಿರೂಪಾಕ್ಷರವರು ಮತ್ತು ಪಂಪಾ ಸ್ವಾಮಿಯವರು

ದರೋಜಿ ಕರಡಿ ಧಾಮದಲ್ಲಿ ಹಗಲು ರಾತ್ರಿ ಎನ್ನದೆ, ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ, ಕರಡಿಗಳೊಂದಿಗೆ ಅವಿನಾಭಾವ ಪ್ರೀತಿಯ ಸಂಭಂದ ಬೆಸೆದುಕೊಂಡು ಮಕ್ಕಳಂತೆ ಕಾಯುವ ಧಾಮದ ಕಾವಲುಗಾರ ಪುಟ್ಟಪ್ಪ ಕುಲಕರ್ಣಿ

ಈ ಪ್ರವಾಸದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲಾ ಸ್ನೇಹಿತರಿಗೆ, ಪಂಪಾಸ್ವಾಮಿಯವರಿಗೆ, ವಿರೂಪಾಕ್ಷರವರು ಮತ್ತು ದರೋಜಿಯ ಕಾವಲುಗಾರರಾದ ಪುಟ್ಟಪ್ಪ ಕುಲಕರ್ಣಿ ರವರಿಗೆ ನನ್ನ
ಕೃತಜ್ಞತೆಗಳು ಹಂಪಿಯ ಸುಂದರ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡಿದ ವಿರೂಪಾಕ್ಷರವರಿಗೆ ಧನ್ಯವಾದಗಳು. ತೆನಾಲಿ ಮಂಟಪ ಏರಲು ಸಹಾಯ ಮಾಡಿದ ವೀರೇಶ್ ಮತ್ತು ತಿಮ್ಮಯ್ಯರವರಿಗೆ ಧನ್ಯವಾದಗಳು.

- ಗೌರೀಶ್ ಕಪನಿ